ಬೆಂಗಳೂರು: ಅಗರ,ಹೆಚ್ ಎಸ್ ಆರ್ ಲೇಔಟ್ನಲ್ಲಿ ಜನಿಸಿದ ಆದಿತ್ಯ ಪ್ರತಾಪ್ ಅವರು ಇಂದು ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟನಾಗಿ ಗುರುತಿಸಿಕೊಂಡಿದ್ದಾರೆ. ತಂದೆ ಜಯರಾಮ್ ರೆಡ್ಡಿ ಮತ್ತು ತಾಯಿ ಪದ್ಮಾವತಿ ಅವರ ಸನ್ಮಾರ್ಗದರ್ಶನದಲ್ಲಿ ಬೆಳೆದ ಅವರು, ವಿದ್ಯಾಭ್ಯಾಸದಲ್ಲಿ ಸಾಫ್ಟ್ವೇರ್ ಇಂಜಿನಿಯರಿಂಗ್ ಪೂರ್ಣಗೊಳಿಸಿದ್ದರೂ, ಮನಸ್ಸಿನ ಧ್ಯೇಯ ಮಾತ್ರ ಸಿನಿಮಾ ಕ್ಷೇತ್ರವೇ ಆಗಿತ್ತು.
ಚಿಕ್ಕ ವಯಸ್ಸಿನಿಂದಲೇ ಸಿನಿಮಾವೆಂದರೆ ಪ್ರಾಣವಾಗಿದ್ದ ಆದಿತ್ಯ, ಉತ್ತಮ ಜಾಬ್ ಸಿಕ್ಕರೂ ಅದನ್ನು ಬಿಟ್ಟು ಸಿನಿರಂಗದತ್ತ ಹೆಜ್ಜೆ ಹಾಕಿದರು.


ಅವರ ಸಿನಿ ಪ್ರಯಾಣ ತಮಿಳಿನ ಅರಿಯಮೈ ಚಿತ್ರದ ಮೂಲಕ ಆರಂಭವಾಯಿತು. ನಿರ್ದೇಶಕ ಲಾಲಿ ರಾಘವ ಮತ್ತು ನಿರ್ಮಾಪಕ ಕ್ರೈಸ್ಟ್ ರಾಜ್ ಅವರ ಚಿತ್ರದ ಮೊದಲ ಹೆಜ್ಜೆ ಇಟ್ಟ ಅವರು, ನಂತರ ಕನ್ನಡದಲ್ಲಿ ರಾಜತಂತ್ರ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಅವರೊಂದಿಗೆ ಅಭಿನಯಿಸಿದರು. ಈ ಚಿತ್ರಕ್ಕೆ ಪಿ.ವಿ.ಆರ್ ಸ್ವಾಮಿ ನಿರ್ದೇಶನ ಮಾಡಿದ್ದರು.

ಅದರ ಬಳಿಕ ಕನ್ನಡದಲ್ಲಿ ಸತತವಾಗಿ ಏಳು ಸಿನಿಮಾಗಳಲ್ಲಿ ಅಭಿನಯಿಸಿ ತಮ್ಮ ಪ್ರತಿಭೆಯನ್ನು ತೋರಿಸಿದರು. ನಾಯಕನಾಗಿ ಪರಿಚಯವಾದ ಚಿತ್ರ ಸ್ಥಬ್ದ. ಲಾಲಿ ರಾಘವ ನಿರ್ದೇಶನ ಹಾಗೂ ಡಾ.ವಿದ್ಯಾಸಾಗರ್ ನಿರ್ಮಾಣದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಆದಿತ್ಯ ಮೂರು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ವಿಶೇಷ ಮೆಚ್ಚುಗೆ ಪಡೆದರು. ಮೆಜೆಸ್ಟಿಕ್ ತ್ರಿವೇಣಿ ಚಿತ್ರಮಂದಿರದಲ್ಲಿ 50 ದಿನಗಳ ಯಶಸ್ವಿ ಪ್ರದರ್ಶನ ಕಂಡ ಈ ಸಿನಿಮಾ, ಅವರ ಸಿನಿ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಯಿತು.

ಮುಂದಿನ ಭಾರೀ ಬಜೆಟ್ ಚಿತ್ರ ಇವಿಲ್ ಕೂಡ ಸ್ತಬ್ಧ ತಂಡದೊಂದಿಗೆ ಮೂಡಿಬರುತ್ತಿದ್ದು, ಅವರಿಗಿದು ಹೆಮ್ಮೆಯ ವಿಷಯ. ನಂತರ 7 The secret ಚಿತ್ರದಲ್ಲಿ ರಶ್ಮಿ ಪಿ ನಿರ್ದೇಶನದಲ್ಲಿ, ಕಿರಣ್ ಕುಮಾರ್ ಸಹ ನಿರ್ಮಾಣದಲ್ಲಿ, ನಾಯಕಿ ಪ್ರಿಯಾಂಕಾ ಜೊತೆಗೆ ಅಭಿನಯಿಸುತ್ತಿದ್ದಾರೆ. ಪಿ.ವಿ.ಆರ್ ಸ್ವಾಮಿ ಅವರೊಂದಿಗೆ ರೌ ಚಿತ್ರವೂ ಶುರುವಾಗುತ್ತಿದೆ. ಅಲ್ಲದೆ ಸ್ವಾತಂತ್ರ್ಯ ಶೂರರು ಹಾಗೂ ಫೀನಿಕ್ಸ್ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿವೆ.

ಆಕ್ಷನ್ ಫೈಟ್ಗಳ ಮೇಲೆ ವಿಶೇಷ ಆಸಕ್ತಿ ಹೊಂದಿರುವ ಆದಿತ್ಯ, “ಶ್ರಮ ಮತ್ತು ಶ್ರದ್ಧೆ ಇದ್ದರೆ ಯಾವುದೇ ಜವಾಬ್ದಾರಿಯೂ ಸುಲಭವಾಗುತ್ತದೆ” ಎಂಬ ನಂಬಿಕೆಯನ್ನು ಜೀವನ ಮಂತ್ರವಾಗಿ ತೆಗೆದುಕೊಂಡಿದ್ದಾರೆ. ಪುಸ್ತಕ ಓದುವುದು ಅವರ ಹವ್ಯಾಸ. ಎಲ್ಲಾ ಭಾಷೆಗಳ ಚಲನಚಿತ್ರಗಳನ್ನು ನೋಡುವುದರಿಂದ ತಮ್ಮ ನಟನಾ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದಾರೆ.

ಸಿನಿಮಾ ರಂಗದಲ್ಲಿ ಮೇರುನಟನಾಗಿ ಹೆಸರು ಮಾಡಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿರುವ ಅವರು, ಸಮಾಜ ಸೇವೆಯತ್ತಲೂ ಒಲವು ಹೊಂದಿದ್ದಾರೆ. ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇರುವ ಆದಿತ್ಯ, ಮುಂದಿನ ದಿನಗಳಲ್ಲಿ ಪ್ರಾಣಿಗಳಿಗೆ ಆಶ್ರಯ ನೀಡುವ ಎನ್ಜಿಒ ಸ್ಥಾಪಿಸುವ ಕನಸು ಹೊಂದಿದ್ದಾರೆ.ಇವರ ಈ ಸೇವೆಯನ್ನು ಗುರುತಿಸಿ “ಭಾರತ ಕಲಾ ರತ್ನ” “ಭಾರತ್ ಬುಕ್ ಆಫ್ ರೆಕಾರ್ಡ್ಸ್” ಹಾಗೂ ಹಲವು ಪ್ರಶಸ್ತಿಗಳು ಮುಡಿಗೇರಿಸಿಕೊಂಡಿದ್ದಾರೆ“ಕನಸು ಕಂಡವನು ಗೆಲ್ಲಬಹುದು, ಆದರೆ ಕನಸಿಗಾಗಿ ಹೋರಾಡಿದವನು ಇತಿಹಾಸ ರಚಿಸುತ್ತಾನೆ” ಎಂಬ ಮಾತಿನಂತೆ, ಆದಿತ್ಯ ಪ್ರತಾಪ್ ಅವರ ಸಿನಿ ಪಯಣ ಯುವಜನತೆಗೆ ಸ್ಪೂರ್ತಿಯಾಗಿದೆ. ತಮ್ಮ ಪರಿಶ್ರಮ, ಧೈರ್ಯ ಮತ್ತು ದೃಢಸಂಕಲ್ಪದ ಮೂಲಕ ಅವರು ಇನ್ನೂ ಹೆಚ್ಚಿನ ಎತ್ತರ ತಲುಪಲಿ ಎಂಬುದು ಅಭಿಮಾನಿಗಳ ಆಶಯ.



