ಬೆಂಗಳೂರು,ಫೆಬ್ರವರಿ 28: ಮಲತ್ತಹಳ್ಳಿಯ ಗಾನ ಪಲ್ಲವಿ ಆಡಿಟೋರಿಯಂನಲ್ಲಿ ಶನಿವಾರ ಆಚಾರ್ಯ ಪ್ರತಿಷ್ಠಾನ ಫೌಂಡೇಶನ್ (ರಿ) ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು. ಸಂಸ್ಥಾಪಕ ಅಧ್ಯಕ್ಷರಾದ ಡಾ. ಎಸ್. ಪಿ. ಆಚಾರ್ಯ ಅವರ ಸಾರಥ್ಯದಲ್ಲಿ ನಡೆದ ಈ ಕಾರ್ಯಕ್ರಮವು ಸಾಂಸ್ಕೃತಿಕ ಕಳೆಗೇರಿಸಿತು.
ಈ ಸಂದರ್ಭದಲ್ಲಿ ಕನ್ನಡ ನಾಡು–ನುಡಿ, ನೆಲ–ಜಲ, ಭಾಷೆ, ಕಲೆ, ಸಂಗೀತ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಅಪೂರ್ವ ಕೊಡುಗೆ ನೀಡಿರುವ ಖ್ಯಾತ ಗಾಯಕ ಶಶಿಧರ ಕೋಟೆ ಅವರಿಗೆ ‘ಗಾಯನ ರತ್ನ’ ಬಿರುದನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ, ಫಲಕ ಹಾಗೂ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸನ್ಮಾನ ಸ್ವೀಕರಿಸಿದ ಶಶಿಧರ ಕೋಟೆ ಅವರು ಮಾತನಾಡಿ, “ಈ ಗೌರವ ನನ್ನ ಹೊಣೆಗಾರಿಕೆಯನ್ನು ಇನ್ನಷ್ಟು ಹೆಚ್ಚಿಸಿದೆ. ಕನ್ನಡ ಸಂಸ್ಕೃತಿ ಮತ್ತು ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸದಾ ಶ್ರಮಿಸುತ್ತೇನೆ,” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಸಂಗೀತ ಗಾಯನ, ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಗಣ್ಯರ ಅಭಿನಂದನಾ ಭಾಷಣಗಳು ನಡೆಯಿತು. ವಿಶೇಷವಾಗಿ ಚಲನಚಿತ್ರ ನಟರಾದ ಮೈಕೋ ನಾಗರಾಜ್, ಎಸ್ಕಾರ್ಟ್ ಶ್ರೀನಿವಾಸ್, ಶಿವಕುಮಾರ್ ಆರಾಧ್ಯ, ಸುರೇಶ್ ಜೂನಿಯರ್ ವಿಷ್ಣುವರ್ಧನ್, ಸದಾನಂದ್ ಕನ್ನಡ ರತ್ನ ಹರೀಶ್, ನಟಿ ಭಾಗ್ಯಶ್ರೀ ಪಂಡಿತ್, ಡಾ. ದಿನೇಶ್ ಗುರೂಜಿ, ಕರಾಟೆ ಶ್ರೀನಾಥ್, ಡಾ. ಸಿ. ಎಂ. ಗಣೇಶ್ ಗೌಡ, ಸುಶೀಲ ಗೌಡ ಹಾಗೂ ಕರುನಾಡ ನಿಧಿ ಪತ್ರಿಕೆಯ ಪ್ರಧಾನ ಸಂಪಾದಕರಾದ ಸೈಯದ್ ಸಲ್ಮಾನ್ ಉಪಸ್ಥಿತರಿದ್ದು ಸಮಾರಂಭಕ್ಕೆ ಮೆರುಗು ತಂದರು.
ಆಚಾರ್ಯ ಪ್ರತಿಷ್ಠಾನ ಫೌಂಡೇಶನ್ ಸಮಾಜಮುಖಿ ಚಟುವಟಿಕೆಗಳ ಮೂಲಕ ಪ್ರತಿಭಾವಂತರನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ಇಂತಹ ಸನ್ಮಾನ ಸಮಾರಂಭಗಳು ಯುವ ಪೀಳಿಗೆಗೆ ಪ್ರೇರಣೆಯಾಗುತ್ತಿವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ಅನುಷಾ ರೆಡ್ಡಿ ಅವರ ಹುಟ್ಟುಹಬ್ಬದ ಪ್ರಯುಕ್ತ ಗಣ್ಯರನ್ನು ವಿಶೇಷವಾಗಿ ಗೌರವಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಮಾಜ ಸೇವಕರು ಹಾಗೂ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.





