ಬೆಂಗಳೂರು ನಗರದ ಪ್ರಸಿದ್ಧ ಲಲಿತ ಕಲಾ ಆಡಿಟೋರಿಯಂನಲ್ಲಿ ಸ್ವರಸಮ್ಮಿಲನ ಮ್ಯೂಸಿಕಲ್ ಅಕಾಡೆಮಿ ವತಿಯಿಂದ ಸ್ವರ ಸಂಗೀತ ಗಾನೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವು ಸಂಗೀತ ಪ್ರಿಯರ ಮನಸ್ಸು ಗೆದ್ದು, ಕಲಾಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸಿತು.
ಕಾರ್ಯಕ್ರಮದಲ್ಲಿ ಶ್ರೀಮತಿ ಗೌರಿ ಹಾಗೂ ಶ್ರೀ ಗಜೇಂದ್ರ ಅವರು ಕರೋಕೆ ಗಾಯನದ ಮೂಲಕ ಅನೇಕ ಮಧುರ ಗೀತೆಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ವಿವಿಧ ಶೈಲಿಯ ಹಾಡುಗಳನ್ನು ಗಾಯಕರು ಹಾಡಿದರು ಇವರ ಗಾಯನಕ್ಕೆ ಪ್ರೇಕ್ಷಕರು ಭರ್ಜರಿ ಚಪ್ಪಾಳೆ ತಟ್ಟಿ ಅಭಿನಂದಿಸಿದರು.
ಸ್ವರಸಮ್ಮಿಲನ ಮ್ಯೂಸಿಕಲ್ ಅಕಾಡೆಮಿಯ ವ್ಯವಸ್ಥಾಪಕರಾಗಿ ಶ್ರೀಮತಿ ಗೌರಿ ಗಜೇಂದ್ರ ಅವರು ಕಾರ್ಯಕ್ರಮವನ್ನು ಸಮರ್ಪಕವಾಗಿ ಸಂಯೋಜಿಸಿ, ಪ್ರತಿಯೊಂದು ಹಂತದಲ್ಲೂ ಸೂಕ್ತ ವ್ಯವಸ್ಥೆ ಮಾಡಿದರು. ಸಂಸ್ಥಾಪಕರಾದ ಶ್ರೀ ಗಜೇಂದ್ರ ಅವರು ಅಕಾಡೆಮಿಯ ಉದ್ದೇಶ, ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಸಂಕಲ್ಪ ಮತ್ತು ಸಂಗೀತದ ಮೂಲಕ ಸಮಾಜದಲ್ಲಿ ಸಾಂಸ್ಕೃತಿಕ ಮೌಲ್ಯಗಳನ್ನು ಬೆಳೆಸುವ ಮಹತ್ವವನ್ನು ತಮ್ಮ ಮಾತಿನಲ್ಲಿ ವಿವರಿಸಿದರು.

ಕಾರ್ಯಕ್ರಮದ ವಿಶೇಷತೆ ಎಂದರೆ ಕರೋಕೆ ಗಾಯನದ ಮೂಲಕ ಸಾಮಾನ್ಯ ಕಲಾವಿದರಿಗೂ ವೇದಿಕೆ ಒದಗಿಸಿ, ಅವರ ಪ್ರತಿಭೆಯನ್ನು ಹೊರತರುವ ಅವಕಾಶ ನೀಡಿದ್ದು. ಭಾಗವಹಿಸಿದ ಕಲಾವಿದರು ತಮ್ಮ ಪ್ರತಿಭೆಯನ್ನು ಆತ್ಮವಿಶ್ವಾಸದಿಂದ ಪ್ರದರ್ಶಿಸಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.





