ವಿಶೇಷ ವರದಿ : ಎನ್.ರಾಜಕುಮಾರ್.
ಪೂರ್ವಕ್ಕೆ ಬ್ರಿಟಿಷರ ಕಾಲದ ಪೋರು ಗುಡ್ಡ, ದಕ್ಷಿಣಕ್ಕೆ ಅಂಜನಾದ್ರಿ, ತಿಮ್ಮಪ್ಪನ ಬೆಟ್ಟ, ಪಶ್ಚಿಮಕ್ಕೆ ನಂಜಪ್ಪನ ಕೊಳ್ಳ, ಕಳ್ಳರಮಟ್ಟಿ ಇವೆಲ್ಲದರ ಬೆಟ್ಟಗುಡ್ಡಗಳ ನಡುವೆ ಅಡಗಿರುವುದು ಸಿರಿಗೇರಿಯ ಶ್ರೀ ನಾಗನಾಥೇಶ್ವರ ಹಾಗೂ ಸಿರಿಗೇರಮ್ಮನ ದೇವಸ್ಥಾನ.
*ಇತಿಹಾಸ:*
ಗ್ರಾಮದ ಹೊರಗಡೆ ಪೂರ್ವಭಾಗದಲ್ಲಿ ಒಂದು ವಿಶಾಲವಾದ ಮಧ್ಯಭಾಗದಲ್ಲಿರುವ ನಾಗನಾಥೇಶ್ವರ ದೇಗುಲ ಉತ್ತರ ಅಭಿಮುಖವಾಗಿದೆ. ಮೂರು ಅಂಕಣದ ಸಭಾಮಂಟಪದಲ್ಲಿ ಸೌಂದರ್ಯಗರ್ಭಿತ ಕೆತ್ತನೆಯ ನಾಲ್ಕು ಸ್ತಂಭಗಳಿವೆ. ಹೊಸತನದ ಕೆತ್ತನೆಯ ಬಸವಣ್ಣನ ಮೂರ್ತಿ ಇದೆ.

ರಂಗಮಂಟಪದ ಮೇಲೆ ಭುವನೇಶ್ವರಿ ಇದೆ. ಸಭಾ ಮಂಟಪಕ್ಕೆ ಹೊಂದಿಕೊಂಡು ಅತಿ ಚಿಕ್ಕದಾದ ಗರ್ಭಗುಡಿಯಲ್ಲಿ ಎರಡಡಿ ಎತ್ತರದ ಚೌಕಾಕಾರದ ಪೀಠದ ಮೇಲೆ ಒಂದು ಅಡಿ ಎತ್ತರದ ಶಿವಲಿಂಗವಿದೆ. ಗರ್ಭಗೃಹದ ಮೇಲೆ ಕದಂಬ ನಾಗರ ಶೈಲಿಯ ಗೋಪುರವಿದೆ. ಪ್ರತಿವರ್ಷ ಚೈತ್ರ ಶುದ್ಧ ಸಪ್ತಮಿಯ ದಿನ ಯುಗಾದಿ ಕಳೆದ ಏಳು ದಿನದಲ್ಲಿ ನಾಗನಾಥೇಶ್ವರ ಹಾಗೂ ಸಿರಿಗೇರಮ್ಮನ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗುತ್ತದೆ. ಮೂಲತಹ ಈ ದೇವಸ್ಥಾನ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣಗೊಂಡಿದೆ ಎಂದು ಹೇಳಲಾಗುತ್ತದೆ.
*ಸಿರಿಗೇರಮ್ಮನ ಇತಿಹಾಸ*
ಸಿರುಗುಪ್ಪ ತಾಲೂಕಿನ ಬಳ್ಳಾರಿ ಜಿಲ್ಲೆಯ ಸಿರಿಗೇರಿ ಎಂಬ ಹೆಸರು ಬರುವುದಕ್ಕೆ ಹಲವಾರು ಕಾರಣಗಳಿವೆ. ಕೆಲವರು ಸಿರಿಧಾನ್ಯ ಬೆಳೆಯುವುದರಿಂದ ಸಿರಿಗೇರಿ ಎಂಬ ಇತಿಹಾಸ ಬಂದಿದೆ. ಮತ್ತೆ ಕೆಲವರು ಬಂಗಾರದ ತೆಪ್ಪ ಊರ ಕೆರೆಗೆ ಹರಿದು ಬಂದಿತ್ತು. ಹಾಗಾಗಿ ಸಿರಿಗೇರಿ ಎಂಬ ಹೆಸರು ಬಿತ್ತು ಎಂದರೆ, ಇನ್ನೂ ಕೆಲವರು ಇದೇ ಗ್ರಾಮದ ಸಿರಿಗೇರಮ್ಮ ಎಂಬಾಕಿಯನ್ನು ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣಕ್ಕೆ ಕೊಟ್ಟಿದ್ದರು. ಗಂಡನ ಮನೆಯಿಂದ ಬೇಸತ್ತು ತವರು ಊರಿಗೆ ಹಿಂತುರುಗಿದಳು. ರೊಚ್ಚಿಗೆದ್ದ ಗಂಡ ಸಿರಿಗೇರಿಗೆ ಬಂದು ಹೆಂಡತಿಯ ತುರುವನ್ನು ಕತ್ತರಿಸಿಕೊಂಡು ಹೋದನು. ಇದರಿಂದ ಆಕ್ರೋಶ ಭರಿತಳಾದ ಸಿರಿಗೇರಮ್ಮ ಗಂಡನ ಶಿರಶ್ಚೇಧ ಮಾಡಿ ತವರು ಊರಲ್ಲಿಯೇ ಸಮಾಧಿಯಾಗಿ ಹೆಣ್ಣು ಮಕ್ಕಳ ನಂಬಿಕೆಗೆ ಪಾತ್ರರಾದಳು ಎಂಬ ದೃಢ ನಂಬಿಕೆ ಇದೆ. ಅಂದಿನಿಂದ ಇಂದಿನವರೆಗೂ
ಇಲ್ಲಿಂದ ಕೊಡಲ್ಪಟ್ಟ ಹೆಣ್ಣು ಮಕ್ಕಳು ಸಿರಿಗೇರಿಯಲ್ಲಿ ನೆಲೆಸಿ ಶಿರಿಗೇರಮ್ಮ ಎಂಬ ಹೆಸರು ಪಡೆದು ಹೆಣ್ಣು ಮಕ್ಕಳ ತಾಯಿ ಎನಿಸಿಕೊಂಡಿದ್ದಾಳೆ ಎಂಬುದು ಇಲ್ಲಿನ ಹಿರಿಯರ ದೃಢಸಂಕಲ್ಪದ ನಂಬಿಕೆ. ಇದು ಸಾಂಪ್ರದಾಯಿಕ ಪದ್ಧತಿಯೋ? ಅಥವಾ ಮೂಢಚರವೋ ಗೊತ್ತಿಲ್ಲ. ಆದರೆ ಇಲ್ಲಿನ ಬಹುತೇಕ ಹೆಣ್ಣು ಮಕ್ಕಳು ಇಲ್ಲಿಯೇ ನೆಲೆಸಿರುವುದಂತೂ ಖಚಿತ. ಆ ಕಾರಣಕ್ಕಾಗಿ ನಾಗನಾಥೇಶ್ವರ ಜಾತ್ರೆಯಾದ ಬಳಿಕ ಸಿರಿಗೇರಮ್ಮನ ಜಾತ್ರೆ ಅತ್ಯಂತ ವೈವಿಧ್ಯಮಯವಾಗಿ ಜರುಗುತ್ತದೆ.

ಆಶ್ಚರ್ಯಕರ ಸಂಗತಿ ಏನಂದರೆ ಪ್ರತಿ ಗ್ರಾಮದಲ್ಲಿ ಹಬ್ಬ ಹರಿದಿನಗಳು ನಡೆದ ನಂತರ ಮರುದಿನ ಈ ಊರಿನಲ್ಲಿ ಹಬ್ಬ ಹರಿದಿನಗಳು ನಡೆಯುತ್ತವೆ. ಬಹುತೇಕ ಎಲ್ಲಾ ತೇರುಗಳು, ರಥೋತ್ಸವಗಳು ಪೂರ್ವ ದಿಕ್ಕಿನತ್ತ ಸಾಗಿದರೆ, ಇಲ್ಲಿನ ರಥೋತ್ಸವ ಪಶ್ಚಿಮ ದಿಕ್ಕಿನತ್ತ ಸಾಗುವುದು ವಾಡಿಕೆ ಇದೆ.
*ಸೇವೆ :*
ಈಗಾಗಲೇ ಕರ್ನಾಟಕ ಸರ್ಕಾರ ಈ ದೇವಸ್ಥಾನವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರ್ಪಡೆ ಮಾಡಿಸಿಕೊಳ್ಳಲು ಸುತ್ತೋಲೆ ನೀಡಿದೆ. ಆದರೆ ಇದಕ್ಕೆ ಮನವೊಪ್ಪದ ಗ್ರಾಮಸ್ಥರು ಸಿರಿಗೇರಿ ಸಿದ್ದರಾಂಪುರ, ಗ್ರಾಮದ ಎಲ್ಲಾ ಕುಲಬಾಂಧವರು ಒಗ್ಗೂಡಿ ಕೆಲಸ ಕಾರ್ಯಗಳನ್ನು ಹಂಚಿಕೊಂಡು ಸಾಮರಸ್ಯದಿಂದ ರಥೋತ್ಸವ ಕಾರ್ಯಕ್ರಮವನ್ನು ನೆರವೇರಿಸುತ್ತಾರೆಂದು ತಿಳಿಸಿ ಸ್ವತಹ ಗ್ರಾಮಸ್ಥರೇ ಆಡಳಿತ ವರ್ಗದಲ್ಲಿ ಮುಂಚೂಣಿಯಲ್ಲಿ ಸಾಗಿದ್ದು, ಯಾವುದೇ ರೀತಿಯ ತಂಟೆ ತಕರಾರು ಇಲ್ಲದೆ ವಿಜೃಂಭಣೆಯಿಂದ ಜಾತ್ರೆ ಸಾಗಿಸುತ್ತಾರೆ. ಇದೇ ತಿಂಗಳು 25ರಂದು ನಾಗನಾಥೇಶ್ವರ ರಥೋತ್ಸವ, 27ರಂದು ಸಿರಿಗೇರಮ್ಮ ರಥೋತ್ಸವ ಜಾತ್ರೆಗೆ ಎಲ್ಲರೂ ಬನ್ನಿ ಯಶಸ್ವಿಗೊಳಿಸಿ ಎಂಬುದು ಎಲ್ಲರ ಅಭಿಲಾಷೆಯಾಗಿದೆ.






