ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜನಿಸಿದ ಡಾ.ಸೌಜನ್ಯ ಶರತ್ ಚಂದ್ರ ಅವರು ಸಮಾಜ ಸೇವೆ, ಶಿಕ್ಷಣ, ಸಾಹಿತ್ಯ,ಉದ್ಯಮಶೀಲತೆ, ಮಾನವೀಯತೆ ಹಾಗೂ ಮಹಿಳಾ ಸಬಲೀಕರಣ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಬಹುಮುಖ ಪ್ರತಿಭೆಯ ವ್ಯಕ್ತಿತ್ವವಾಗಿದ್ದಾರೆ.

ಸರಳತೆ, ಸೇವಾ ಮನೋಭಾವ, ಕರುಣೆ ಹಾಗೂ ನಾಯಕತ್ವದ ಗುಣಗಳಿಂದ ಸಮಾಜದಲ್ಲಿ ಗೌರವಾನ್ವಿತ ಸ್ಥಾನವನ್ನು ಪಡೆದಿರುವ ಅವರು ಅನೇಕ ಮಹಿಳೆಯರಿಗೆ ಸ್ಪೂರ್ತಿದಾಯಕ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
ಡಾ.ಸೌಜನ್ಯ ಅವರು ಮೈಸೂರು ನಗರದ ಗೌರವಾನ್ವಿತ ಕುಟುಂಬದಲ್ಲಿ ಜನಿಸಿದ್ದು, ಖ್ಯಾತ ವೈದ್ಯರಾದ ಡಾ.ರಾಜಶೇಖರ್ ಹಾಗೂ ಡಾ.ಲತಾ ರಾಜಶೇಖರ್ ಅವರ ಪುತ್ರಿಯಾಗಿದ್ದಾರೆ. ಬಾಲ್ಯದಿಂದಲೇ ಶಿಸ್ತು, ಮಾನವೀಯತೆ ಹಾಗೂ ಸಮಾಜಮುಖಿ ಚಿಂತನೆಗಳನ್ನು ಅಳವಡಿಸಿಕೊಂಡ ಅವರು ವಿದ್ಯಾಭ್ಯಾಸದಲ್ಲಿಯೂ ಅಪೂರ್ವ ಸಾಧನೆ ಮಾಡಿದ್ದಾರೆ.

ಮೈಸೂರು ವಿಶ್ವವಿದ್ಯಾಲಯದ ರ್ಯಾಂಕ್ ಹೋಲ್ಡರ್ ಹಾಗೂ ಗೋಲ್ಡ್ ಮೆಡಲಿಸ್ಟ್ ಆಗಿ ಗುರುತಿಸಿಕೊಂಡು ತಮ್ಮ ಪ್ರತಿಭೆ ಮತ್ತು ಪರಿಶ್ರಮವನ್ನು ಸಾಬೀತುಪಡಿಸಿದ್ದಾರೆ.ಇವರು ಖ್ಯಾತ ಅಸ್ಥಿ ತಜ್ಞರಾದ ಡಾ.ಶರತ್ ಚಂದ್ರ ಅವರನ್ನು ವಿವಾಹವಾಗಿದ್ದು,ಅವರು ಬೆಂಗಳೂರಿನ ಪ್ರತಿಷ್ಠಿತ ಸಾಗರ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ದಂಪತಿಗಳಿಗೆ ಶ್ರೇಯಾನ್ ಶರತ್ ಚಂದ್ರ ಹಾಗೂ ಸಾನ್ವಿ ಶರತ್ ಚಂದ್ರ ಎಂಬ ಇಬ್ಬರು ಮಕ್ಕಳಿದ್ದು,ಇಬ್ಬರೂ ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.ತಮ್ಮ ತಾತಂದಿರಾದ ಡಾ.ರಾಜಶೇಖರ್ ಹಾಗೂ ಡಾ.ಹನುಮಯ್ಯ ಅವರ ಮಾನವೀಯ ವೈದ್ಯಕೀಯ ಪರಂಪರೆಯನ್ನು ಮುಂದುವರಿಸುವ ಸಂಕಲ್ಪದೊಂದಿಗೆ ಅವರು ಶಿಕ್ಷಣದಲ್ಲಿ ತೊಡಗಿಸಿಕೊಂಡಿದ್ದಾರೆ.

ಡಾ.ಸೌಜನ್ಯ ಅವರು ಕೇವಲ ವಿದ್ಯಾಭ್ಯಾಸ ಮತ್ತು ಸಮಾಜ ಸೇವೆಯಲ್ಲದೆ ವ್ಯಕ್ತಿತ್ವ ಹಾಗೂ ಸೌಂದರ್ಯ ಕ್ಷೇತ್ರದಲ್ಲಿಯೂ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.“Mrs. Bharath 2018” ಹಾಗೂ “Mrs. India 2020” ಕಿರೀಟಗಳನ್ನು ತಮ್ಮದಾಗಿಸಿಕೊಂಡು ಮಹಿಳಾ ಸಬಲೀಕರಣದ ಪ್ರತೀಕವಾಗಿ ಹೊರಹೊಮ್ಮಿದ್ದಾರೆ.

ಆತ್ಮವಿಶ್ವಾಸ, ಶಿಸ್ತು ಹಾಗೂ ಸಮಾಜಮುಖಿ ಚಿಂತನೆಗಳ ಮೂಲಕ ಅನೇಕ ಮಹಿಳೆಯರಿಗೆ ಪ್ರೇರಣೆಯಾಗಿದ್ದಾರೆ.ಉದ್ಯಮ ಕ್ಷೇತ್ರದಲ್ಲಿಯೂ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಅವರು Sanovis Life Sciences ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮೈಸೂರಿನ IOCL ಪೆಟ್ರೋಲ್ ಬಂಕ್ನ ಮಾಲೀಕರಾಗಿಯೂ ಯಶಸ್ವಿ ಉದ್ಯಮಿಯಾಗಿದ್ದಾರೆ.
ಜೊತೆಗೆ ಇಂಟೀರಿಯರ್ ಡಿಸೈನರ್ ಆಗಿಯೂ ಸೃಜನಾತ್ಮಕ ವಿನ್ಯಾಸಗಳ ಮೂಲಕ ವಿಶಿಷ್ಟ ಗುರುತು ಮೂಡಿಸಿದ್ದಾರೆ.
ಕೌನ್ಸೆಲಿಂಗ್ ಕ್ಷೇತ್ರದಲ್ಲಿಯೂ ಸೇವೆ ಸಲ್ಲಿಸುತ್ತಿರುವ ಡಾ.ಸೌಜನ್ಯ ಅವರು ಭಾವನಾತ್ಮಕ ಸಮಸ್ಯೆಗಳು,ಮಾನಸಿಕ ಒತ್ತಡ ಹಾಗೂ ವೈಯಕ್ತಿಕ ಜೀವನದ ಸವಾಲುಗಳನ್ನು ಎದುರಿಸುತ್ತಿರುವವರಿಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಿದ್ದಾರೆ.

ಮಾನವೀಯ ಸ್ಪಂದನೆ ಹಾಗೂ ಸಹಾನುಭೂತಿಯೊಂದಿಗೆ ಜನರ ಭಾವನೆಗಳನ್ನು ಅರ್ಥಮಾಡಿಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಮಾಡುತ್ತಿದ್ದಾರೆ.ಸಮಾಜ ಸೇವೆಯೇ ತಮ್ಮ ಜೀವನದ ಧ್ಯೇಯವೆಂದು ನಂಬಿರುವ ಡಾ. ಸೌಜನ್ಯ ಅವರು“ಜಾಗೃತಿ ಚಾರಿಟೇಬಲ್ ಟ್ರಸ್ಟ್” ಸ್ಥಾಪಿಸಿ ಅದರ ಮೂಲಕ ಅನೇಕ ಸಾಮಾಜಿಕ ಸೇವಾ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದಾರೆ.ಗ್ರಾಮೀಣ ಹಾಗೂ ಹಿಂದುಳಿದ ಪ್ರದೇಶಗಳಲ್ಲಿ ಆರೋಗ್ಯ ತಪಾಸಣಾ ಶಿಬಿರಗಳು, ಕಣ್ಣಿನ ತಪಾಸಣಾ ಶಿಬಿರಗಳು, ಕ್ಯಾನ್ಸರ್ ಪತ್ತೆ ಶಿಬಿರಗಳು, ರಕ್ತದಾನ ಶಿಬಿರಗಳು ಸೇರಿದಂತೆ ಹಲವು ಆರೋಗ್ಯ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.
ಆರ್ಥಿಕವಾಗಿ ಹಿಂದುಳಿದ ಹಾಗೂ ಬುಡಕಟ್ಟು ಜನಾಂಗದ ಮಕ್ಕಳ ಶಿಕ್ಷಣಕ್ಕಾಗಿ ಪ್ರಾಯೋಜಕತ್ವ ನೀಡಿ ಅವರ ಭವಿಷ್ಯ ನಿರ್ಮಾಣಕ್ಕೆ ನೆರವಾಗಿದ್ದಾರೆ. ಹಲವು ಹಳ್ಳಿಗಳನ್ನು ದತ್ತು ತೆಗೆದುಕೊಂಡು ಅವುಗಳ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಸಮಾಜದ ನಿರ್ಗತಿಕರು, ವೃದ್ಧರು ಹಾಗೂ ಅಗತ್ಯವಿರುವವರಿಗೆ ಸದಾ ನೆರವಾಗುತ್ತಿರುವುದು ಅವರ ಮಾನವೀಯತೆಯ ಉದಾಹರಣೆಯಾಗಿದೆ.

ಕೊವಿಡ್ ಮಹಾಮಾರಿ ಸಂದರ್ಭದಲ್ಲಿ ಕೂಲಿ ಕಾರ್ಮಿಕರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ನಿರಂತರ ಎರಡು ವರ್ಷಗಳ ಕಾಲ ಆಹಾರ ಪೂರೈಕೆ ಮಾಡಿ ಮಾನವೀಯ ಸೇವೆಯ ಮಾದರಿಯಾಗಿದ್ದರು. ಸಂಕಷ್ಟದ ಸಮಯದಲ್ಲಿ ಸಾವಿರಾರು ಕುಟುಂಬಗಳಿಗೆ ಆಶಾಕಿರಣವಾಗಿದ್ದರು.ಪ್ರಾಣಿ ಪ್ರೇಮಿಯಾಗಿರುವ ಅವರು CUPA ಸೇರಿದಂತೆ ಅನೇಕ ಪ್ರಾಣಿ ಕಲ್ಯಾಣ ಸಂಸ್ಥೆಗಳಿಗೆ ದೇಣಿಗೆ ನೀಡಿ ಪ್ರಾಣಿ ಸಂರಕ್ಷಣಾ ಕಾರ್ಯಗಳಲ್ಲಿ ಸಕ್ರಿಯರಾಗಿದ್ದಾರೆ.

ಪರಿಸರದ ಮೇಲಿನ ಅಪಾರ ಪ್ರೀತಿಯಿಂದ ಪರಿಸರ ಸಂರಕ್ಷಣಾ ಚಟುವಟಿಕೆಗಳಲ್ಲಿಯೂ ಭಾಗವಹಿಸಿ “ಪರಿಸರದ ಡಾಕ್ಟರ್” ಎಂಬ ಗೌರವಕ್ಕೂ ಪಾತ್ರರಾಗಿದ್ದಾರೆ.ಸಮಾಜ ಸೇವೆ, ಮಾನವೀಯತೆ ಹಾಗೂ ನಾಯಕತ್ವಕ್ಕಾಗಿ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಲಭಿಸಿವೆ.

ಅವುಗಳಲ್ಲಿ ಪ್ರಮುಖವಾಗಿ:Mrs. Bharath 2018
Mrs. India 2020
Women Achievement Excellence Award – 2022
ಡಾ.ಎಸ್.ರಾಧಾಕೃಷ್ಣನ್ ಸದ್ಭಾವನಾ ಪ್ರಶಸ್ತಿ
ಸಾಮಾಜಿಕ ಪ್ರಭಾವ ಪ್ರಶಸ್ತಿ
Hindustan Gagan Gaurav International Award – 2022
Proud Indian Award
ಹೆಮ್ಮೆಯ ಕನ್ನಡಿಗ ಪ್ರಶಸ್ತಿ
ಕರ್ನಾಟಕ ಕಣ್ಮಣಿ ಪ್ರಶಸ್ತಿ ಆರ್ಯಭಟ ಇಂಟರ್ನ್ಯಾಷನಲ್ ಅವಾರ್ಡ್, ಏಷಿಯಾ ವೇದಿಕ್ ಕಲ್ಚರ್ ಅವಾರ್ಡ್,ಡಾ.ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರಶಸ್ತಿ
ಸ್ವಾಮಿ ವಿವೇಕಾನಂದ ಪ್ರಶಸ್ತಿ
ಕೆಂಗಲ್ ಹನುಮಂತಯ್ಯ ಸದ್ಭಾವನಾ ಪ್ರಶಸ್ತಿ
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ
ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಪ್ರಶಸ್ತಿ – 2023
ನಾಡಪ್ರಭು ಕೆಂಪೇಗೌಡ ಪ್ರಶಸ್ತಿ – 2025
ಮಹಿಳಾ ಸಾಧಕಿ ಪ್ರಶಸ್ತಿ – 2026
ರಾಜಶ್ರೀ ನಾಲ್ವಡಿ ಕೃಷ್ಣರಾಜ ವಡೆಯರ್ ಪ್ರಶಸ್ತಿ
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀ ಯದುವೀರ್ ವಡೆಯರ್ ಅವರಿಂದ “ರಾಜಶ್ರೀ ನಾಲ್ವಡಿ ಕೃಷ್ಣರಾಜ ವಡೆಯರ್ ಪ್ರಶಸ್ತಿ” ಸ್ವೀಕರಿಸಿರುವುದು ಅವರ ಸೇವಾ ಬದುಕಿನ ಮತ್ತೊಂದು ಗರ್ವದ ಕ್ಷಣವಾಗಿದೆ.ರೋಟರಿ ಇಂಟರ್ನ್ಯಾಷನಲ್, ಲಯನ್ಸ್ ಕ್ಲಬ್ ಇಂಟರ್ನ್ಯಾಷನಲ್ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು ಅವರ ಸಮಾಜಮುಖಿ ಸೇವೆಯನ್ನು ಗುರುತಿಸಿ ಸನ್ಮಾನಿಸಿವೆ.

ಕನ್ನಡದ ಹೆಮ್ಮೆಯ “ಕರುನಾಡ ನಿಧಿ” ಪತ್ರಿಕೆಯ “ಕರುನಾಡ ನಿಧಿ” ಪ್ರಶಸ್ತಿಯೂ ಅವರಿಗೆ ಲಭಿಸಿದ್ದು ಸಂತಸದ ಸಂಗತಿಯಾಗಿದೆ.ಸಮಾಜ ಸೇವೆಯ ಜೊತೆಗೆ ಸಾಹಿತ್ಯದ. ಮೇಲೂ ಅಪಾರ ಆಸಕ್ತಿ ಹೊಂದಿರುವ ಡಾ.ಸೌಜನ್ಯ ಅವರು ಕವಯಿತ್ರಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಅವರ ಕವಿತೆಗಳು ಮಾನವೀಯತೆ, ಪ್ರೀತಿ, ಮಹಿಳಾ ಶಕ್ತಿ ಹಾಗೂ ಜೀವನ ಮೌಲ್ಯಗಳನ್ನು ಪ್ರತಿಬಿಂಬಿಸುತ್ತವೆ.ಸೇವಾ ಮನೋಭಾವ, ಕರುಣೆ, ಸೃಜನಾತ್ಮಕತೆ, ನಾಯಕತ್ವ ಹಾಗೂ ಮಾನವೀಯ ಮೌಲ್ಯಗಳ ಮೂಲಕ ಸಾವಿರಾರು ಜನರ ಹೃದಯ ಗೆದ್ದಿರುವ ಡಾ.ಸೌಜನ್ಯ ಶರತ್ ಚಂದ್ರ ಅವರು ಇಂದಿನ ಸಮಾಜದಲ್ಲಿ ಆದರ್ಶ ಮಹಿಳೆಯಾಗಿ, ಪ್ರೇರಣಾದಾಯಕ ಸಮಾಜ ಸೇವಕಿಯಾಗಿ ಹಾಗೂ ಕನ್ನಡ ನಾಡಿನ ಹೆಮ್ಮೆಯ ವ್ಯಕ್ತಿತ್ವವಾಗಿ ಹೊರಹೊಮ್ಮಿದ್ದಾರೆ.






