ಬೆಂಗಳೂರು: ಬಿಸ್ಮಿಲ್ಲಾ ನಗರದಲ್ಲಿರುವ ಬಿಇಟಿ ಸಂಸ್ಥೆಗಳ ವತಿಯಿಂದ ಬಿಇಟಿ ಇಂಗ್ಲಿಷ್ ಪ್ರೈಮರಿ ಸ್ಕೂಲ್, ಬಿಇಟಿ ಸೂಫಿಯಾ ಹೈಸ್ಕೂಲ್, ಬಿಇಟಿ ಕಾಂಪೋಸಿಟ್ ಪಿಯು ಕಾಲೇಜು ಹಾಗೂ ಬಿಇಟಿ ಸಾದತುನ್ನಿಸಾ ಡಿಗ್ರಿ ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ನಾಯಕತ್ವ ಸಮಾರಂಭವನ್ನು ಇಂಡೋರ್ ಸ್ಟೇಡಿಯಂನ 4ನೇ ಮಹಡಿಯಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾಯಕತ್ವದ ಜವಾಬ್ದಾರಿಗಳನ್ನು ಹಸ್ತಾಂತರಿಸುವ ಮೂಲಕ ನಾಯಕತ್ವದ ಗುಣಗಳನ್ನು ಬೆಳೆಸುವ ಕುರಿತು ಅರಿವು ಮೂಡಿಸಲಾಯಿತು. ಮುಖ್ಯ ಅತಿಥಿಗಳಾಗಿ ಜಿಬಿಎ ವೈದ್ಯಾಧಿಕಾರಿ ಡಾ. ಸೀಮಾ, ಭಾರತೀಯ ಸಂಸ್ಕೃತಿ ವಿದ್ಯಾಪೀಠ ಸಂಸ್ಥೆಗಳ ಪ್ರಧಾನ ಕಾರ್ಯದರ್ಶಿ ಡಾ. ಕೆ.ಎನ್. ಪುಷ್ಪಲತಾ ಹಾಗೂ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಡಾ. ಪ್ರತಾಪ್ ಲಿಂಗಯ್ಯ ಅವರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಬಿಇಟಿ ಕಾಂಪೋಸಿಟ್ ಪಿಯು ಕಾಲೇಜಿನ ಎನ್ಎಸ್ಎಸ್ ಘಟಕ–2026ರ ಉದ್ಘಾಟನೆ ಹಾಗೂ ಕಾಲೇಜು ಮ್ಯಾಗಜಿನ್ ಬಿಡುಗಡೆ ಕಾರ್ಯಕ್ರಮವೂ ನೆರವೇರಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಂಶುಪಾಲರಾದ ಡಾ. ಸೀಮಾ, “ವಿದ್ಯಾರ್ಥಿಗಳು ಉತ್ತಮ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಬೇಕು. ಆರೋಗ್ಯಕರ ಜೀವನಶೈಲಿಯೊಂದಿಗೆ ದೊರೆಯುತ್ತಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಇಂದಿನ ಮಕ್ಕಳಿಗೆ ಹಲವು ಅವಕಾಶಗಳು ದೊರೆಯುತ್ತಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಅತ್ಯಂತ ಮುಖ್ಯ” ಎಂದು ಹೇಳಿದರು.

ವಿದ್ಯಾರ್ಥಿಗಳಲ್ಲಿ ನಾಯಕತ್ವ, ಶಿಸ್ತು, ಸಾಮಾಜಿಕ ಜವಾಬ್ದಾರಿ ಹಾಗೂ ಸೇವಾ ಮನೋಭಾವ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಗಣ್ಯರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಬಿಇಟಿ ಸಂಸ್ಥೆಗಳ ಗೌರವ ಕಾರ್ಯದರ್ಶಿ ಶ್ರೀ ಸಿದ್ದೀಕ್ ಪಾಷಾ, ಕಾರ್ಯಾಧ್ಯಕ್ಷ ಶ್ರೀ ಅಬ್ದುಲ್ ಮುಹೀಬ್ ಸೇರಿದಂತೆ ಸಂಸ್ಥೆಯ ಪ್ರಾಂಶುಪಾಲರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.






