ಜೀವನ ಒಂದು ಸುಂದರ ಪಯಣ, ಏನೇ ಅಡೆತಡೆಗಳು ಬಂದರೂ ಧೈರ್ಯದಿಂದ ಎದುರಿಸಬೇಕು ಜೀವನ ಸುಗಮವಾಗಿ ಸಾಗಿಸಲು ಪ್ರಯತ್ನ ಮಾಡಬೇಕು.ಏನಾದರೂ ಎಡವಟ್ಟು ಮಾಡಿಕೊಂಡರೆ ಸಮಾಜದಲ್ಲಿ ತಲೆ ಎತ್ತಿ ಓಡಾಡಲು ಸಾಧ್ಯವಾಗದು.ಹರೆಯದ ವಯಸ್ಸು ಹಾಗೂ ರೂಪ ಇದೆ ಎಂದು ಅಂಕುಡೊಂಕು ದಾರಿಯಲ್ಲಿ ಹೋಗಬಾರದು.
ಮನೆ , ಸಂಸಾರಕ್ಕೆ ಕೆಟ್ಟ ಹೆಸರು ಯಾವತ್ತಿಗೂ ತರಬಾರದು.ನಮ್ಮ ಮನಸ್ಸು ಹೇಳಿದ ಎಲ್ಲಾ ಮಾತುಗಳನ್ನು ಕೇಳಬಾರದು.ಮೊನ್ನೆ ಒಂದು ಸುದ್ದಿ ಜಾಲ ತಾಣದಲ್ಲಿ ಹರಿದಾಡಿದೆ. ಇಪ್ಪತ್ತೊಂದು ವಯಸ್ಸಿನ ಹುಡುಗ ನಲವತ್ತು ವಯಸ್ಸಿನ ಹೆಂಗಸನ್ನು ಮದುವೆ ಮಾಡಿಕೊಂಡಿದ್ದಾನೆ ಎಂದು.
ಪ್ರೀತಿ, ಪ್ರೇಮ ಇರಬೇಕು ಜೀವನದಲ್ಲಿ.ಅದು ಇದ್ದರೆ ಜೀವನ ಸುಂದರ ಎನಿಸುತ್ತದೆ.ಪ್ರೀತಿ ಮಾಡಬೇಕು ಆದರೆ,ಆ ಪ್ರೀತಿ ಕೊನೆಯವರೆಗೂ ಶಾಶ್ವತವಾಗಿ ಉಳಿಯುತ್ತದೆಯೋ ಇಲ್ಲವೋ ತಿಳಿದಿರಬೇಕು.ನಾನು ಇಲ್ಲಿ ಯಾವುದೇ ಜಾತಿಯ ಬಗ್ಗೆ ಮಾತನಾಡುವುದಿಲ್ಲ, ಪ್ರೀತಿಗೆ ಕಣ್ಣಿಲ್ಲ ನಿಜ, ಆದರೆ ವಯಸ್ಸು ನೋಡಬೇಕು.ಇನ್ನೂ ಈಗ ಜೀವನ ಶುರು ಆಗಿದೆ ಎನ್ನುವರು,ಜೀವನದ ಅರ್ಧ ದಾರಿ ಮುಗಿಸಿರುವವರ ಜೊತೆಗೆ ಜೀವನ ನಡೆಸಲು ಸಾಧ್ಯ ಇದೆಯೇ,ಇಲ್ಲ.
ಹಾಗೇನಾದರೂ ಪ್ರೀತಿ, ಪ್ರೇಮ ಎಂದರೆ ಅದು ಬರೀ ಆಕರ್ಷಣೆ ಅಷ್ಟೇ.ಇಂತಹವರು ತಮ್ಮ ಜೀವನವನ್ನು ತಾವಾಗಿಯೇ ಹಾಳು ಮಾಡಿಕೊಳ್ಳುತ್ತಾರೆ.
ಇನ್ನೂ ಓದಿ ಸಮಾಜದಲ್ಲಿ ಹೆಸರು ಮಾಡಿ ತಂದೆ ತಾಯಿಗೆ ಒಳ್ಳೆಯ ಹೆಸರು ತರುವ ವಯಸ್ಸಿನಲ್ಲಿ,ಏನನ್ನೂ ಸಾಧಿಸದೇ ಬರೀ ಪ್ರೀತಿ ಪ್ರೇಮ ಎಂದು ಹೋದರೆ ನಂತರ ಪಶ್ಚಾತ್ತಾಪ ಪಡಬೇಕಾಗುತ್ತದೆ.ಹರೆಯದ ವಯಸ್ಸಿನಲ್ಲಿ ಮನಸ್ಸು ನಮ್ಮ ಹಿಡಿತದಲ್ಲಿ ಇರುವುದಿಲ್ಲ.ಆಗ ಯಾವುದು ತಪ್ಪು ಯಾವುದು ಸರಿ ಎಂದು ಯೋಚಿಸಿ ಹೆಜ್ಜೆ ಇಡಬೇಕು.ಒಮ್ಮೆ ಮಾನ ಹೋದರೆ ಮತ್ತೆ ತಿರುಗಿ ಬರುವುದಿಲ್ಲ.
ಸಮಾಜದಲ್ಲಿ ತಪ್ಪು ಕೆಲಸ ಮಾಡುವಾಗ ಹತ್ತು ಬಾರಿ ಯೋಚನೆ ಮಾಡಬೇಕು.ಮುಂದೆ ಅದರಿಂದ ಎಷ್ಟು ಕೆಟ್ಟ ಪರಿಣಾಮ ಬೀರಬಹುದು ಎಂದು ತಿಳಿದು ಕೊಳ್ಳಬೇಕು.ನಮ್ಮ ಜೀವನವನ್ನು ನಾವೇ ಹಾಳು ಮಾಡಿಕೊಳ್ಳಬಾರದು.
ಶ್ರೀದೇವಿ ಓಂಕಾರ್
ಬೆಂಗಳೂರು 32



