ಬೆಂಗಳೂರು, ಜ.31: ವಿಕಲಚೇತನರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆಗೆ ಉತ್ತೇಜನ ನೀಡುವ ಉದ್ದೇಶದಿಂದ ವಾಯ್ಸ್ ಆಫ್ ನೀಡಿ ಫೌಂಡೇಶನ್ (ರಿ.) ವತಿಯಿಂದ ಮಹಾಲಕ್ಷ್ಮೀ ಲೇಔಟ್ನಲ್ಲಿ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಜನವರಿ 31, 2026ರಂದು ನಡೆಯಲಿರುವ ಈ ಉದ್ಯೋಗ ಮೇಳದಲ್ಲಿ 50ಕ್ಕೂ ಹೆಚ್ಚಿನ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಿ, ವಿವಿಧ ಹುದ್ದೆಗಳಿಗಾಗಿ ನೇರ ಸಂದರ್ಶನಗಳನ್ನು ನಡೆಸಲಿವೆ.
ಈ ಕಾರ್ಯಕ್ರಮಕ್ಕೆ ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ. ಗೋಪಾಲಯ್ಯ ರವರು ಭಾಗವಹಿಸಿ, ವಿಕಲಚೇತನರ ಉದ್ಯೋಗಾವಕಾಶಗಳ ಬಗ್ಗೆ ಪ್ರೋತ್ಸಾಹದ ಮಾತುಗಳನ್ನಾಡಲಿದ್ದಾರೆ. ವಿಕಲಚೇತನರು ಸಮಾಜದ ಮುಖ್ಯವಾಹಿನಿಯಲ್ಲಿ ಆತ್ಮವಿಶ್ವಾಸದಿಂದ ಮುಂದೆ ಬರಲು ಇಂತಹ ಉದ್ಯೋಗ ಮೇಳಗಳು ಮಹತ್ವದ ವೇದಿಕೆಯಾಗಿವೆ ಎಂದು ಆಯೋಜಕರು ತಿಳಿಸಿದ್ದಾರೆ.
ಉದ್ಯೋಗ ಮೇಳಕ್ಕೆ ಹಾಜರಾಗುವ ಅಭ್ಯರ್ಥಿಗಳು ಪೋಟೊ, ಆಧಾರ್ ಕಾರ್ಡ್, ಎಸ್.ಎಸ್.ಎಲ್.ಸಿ ಅಂಕಪಟ್ಟಿ ಹಾಗೂ ವೈದ್ಯಕೀಯ ಪ್ರಮಾಣ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ತರಬೇಕು ಎಂದು ತಿಳಿಸಲಾಗಿದೆ. ಸ್ಥಳವಾಗಿ 2ನೇ ಕ್ರಾಸ್, 10ನೇ ಮೇನ್, ಶಂಕರನಗರ, ಮಹಾಲಕ್ಷ್ಮೀ ಲೇಔಟ್, ಬೆಂಗಳೂರು – 560086 ನಿಗದಿಪಡಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳಿಗೆ ಪೂರ್ವ ನೋಂದಣಿ ವ್ಯವಸ್ಥೆಯೂ ಕಲ್ಪಿಸಲಾಗಿದ್ದು, ಸ್ಕ್ಯಾನ್ ಮೂಲಕ ಸುಲಭವಾಗಿ ನೋಂದಾಯಿಸಿಕೊಳ್ಳುವ ಅವಕಾಶ ನೀಡಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಈ ಸದುಪಯೋಗವನ್ನು ಪಡೆದು ತಮ್ಮ ವೃತ್ತಿಜೀವನಕ್ಕೆ ಹೊಸ ದಾರಿ ಕಂಡುಕೊಳ್ಳಲಿ ಎಂಬುದು ಆಯೋಜಕರ ಆಶಯವಾಗಿದೆ.






