ಗುಡಿಬಂಡೆಯಲ್ಲಿ ಮೊಟ್ಟಮೊದಲ ‘ಹಿಜಾಮ ಥೆರಪಿ’ ಆರೋಗ್ಯ ಶಿಬಿರ: ನೂರಕ್ಕೂ ಹೆಚ್ಚು ಮಂದಿಗೆ ಚಿಕಿತ್ಸೆ
ಗುಡಿಬಂಡೆ: ಪಟ್ಟಣದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ತಿನ ಸಹಯೋಗದೊಂದಿಗೆ ‘ಹಿಜಾಮ ಥೆರಪಿ’ (Hijama Therapy) ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಪರಿಷತ್ತಿನ ಕಚೇರಿಯಲ್ಲಿ ನಡೆದ ಈ ವಿಶೇಷ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಸಾರ್ವಜನಿಕರು ಪಾಲ್ಗೊಂಡು ಚಿಕಿತ್ಸೆಯ ಲಾಭ ಪಡೆದರು.
ಕಾರ್ಯಕ್ರಮದ ಕುರಿತು ಮಾತನಾಡಿದ ಕರ್ನಾಟಕ ಉರ್ದು ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ ಮಹಮ್ಮದ್ ನಾಸಿರ್ ಅವರು, “ಪರಿಷತ್ತು ಕೇವಲ ಸಾಹಿತ್ಯ ಮತ್ತು ಸಂಸ್ಕೃತಿಗೆ ಸೀಮಿತವಾಗದೆ, ಸಮಾಜದ ಜನರ ಆರೋಗ್ಯದ ಬಗ್ಗೆಯೂ ಕಾಳಜಿ ಹೊಂದಿದೆ. ಈ ನಿಟ್ಟಿನಲ್ಲಿ ಗುಡಿಬಂಡೆ ಜನತೆಗೆ ಅತ್ಯಾಧುನಿಕ ಹಾಗೂ ಸಾಂಪ್ರದಾಯಿಕ ಚಿಕಿತ್ಸಾ ಪದ್ಧತಿಯಾದ ಹಿಜಾಮ ಥೆರಪಿಯನ್ನು ಪರಿಚಯಿಸಲು ನಾವು ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಜನಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು,” ಎಂದು ತಿಳಿಸಿದರು.

ಬೆಂಗಳೂರಿನ ಮದನಿ ಹೆಲ್ತ್ ಕೇರ್ನ ವೈದ್ಯ ಡಾ. ತಾಜ್ಮುಲ್ ಹಸನ್ ಮಾತನಾಡಿ, “ಆರೋಗ್ಯವೇ ನಿಜವಾದ ಸಂಪತ್ತು. ಆರೋಗ್ಯ ಸರಿಯಾಗಿದ್ದರೆ ಜೀವನದ ಸವಾಲುಗಳನ್ನು ಎದುರಿಸಲು ಸಾಧ್ಯ. ನಾವು ಈವರೆಗೆ ದೇಶದಾದ್ಯಂತ ಸಾವಿರಕ್ಕೂ ಹೆಚ್ಚು ಶಿಬಿರಗಳನ್ನು ನಡೆಸಿದ್ದೇವೆ. ಇಂದು ಗುಡಿಬಂಡೆಯಲ್ಲಿ ಈ ಸೇವೆ ಒದಗಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆಯ ವಿಷಯ,” ಎಂದರು.
ಈ ಶಿಬಿರದಲ್ಲಿ ಹಿಂದೂ-ಮುಸ್ಲಿಂ ಸೇರಿದಂತೆ ಎಲ್ಲಾ ಸಮುದಾಯಗಳ ಜನರು ಉತ್ಸಾಹದಿಂದ ಭಾಗವಹಿಸಿದ್ದರು. ವಿಶೇಷವಾಗಿ ಹಲವು ವರ್ಷಗಳಿಂದ ಕಾಡುತ್ತಿದ್ದ ಮಂಡಿ ನೋವು, ಸೊಂಟ ನೋವು, ಕಾಲು ನೋವು ಹಾಗೂ ತಲೆನೋವಿನ ಸಮಸ್ಯೆಗಳಿಗೆ ತಜ್ಞ ವೈದ್ಯರಿಂದ ಹಿಜಾಮ ಚಿಕಿತ್ಸೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ಮಧನಿ ಹೆಲ್ತ್ ಕೇರಿ ನ ವೈದ್ಯರನ್ನು ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಡಾ. ಆಯಿಷಾ ಹುಸೇನ್, ಆರೋಗ್ಯ ಸಿಬ್ಬಂದಿ ಹಾಗೂ ಪ್ರಮುಖರಾದ ನಸ್ರೀನ್ ತಾಜ್, ಶಾರುಖ್, ಸಲ್ಮಾ, ಚಾಂದ್ ಪಾಷಾ, ಖಲೀಲ್ ಪಾಷಾ, ಜಿಲಾನಿ, ಶಬ್ಬೀರ್ ಅಹ್ಮದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






