ಸಿರಿಗೇರಿ ಏ,19:ಸಿರಿಗೇರಿ ಗ್ರಾಮದ ಮಾಜಿ ಶಾಸಕ, ಕರ್ನಾಟಕ ಏಕೀಕರಣ ಪ್ರಶಸ್ತಿ ಪುರಸ್ಕೃತರು, ರೈತ ನಾಯಕ ದಿ :ಸಿ. ಎಂ. ರೇವಣಸಿದ್ದಯ್ಯ ಸ್ವಾಮಿಯವರ ಶತಮಾನೋತ್ಸವ ಆಚರಿಸುವ ಸಲುವಾಗಿ ಗ್ರಾಮದ ಶ್ರೀ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಗ್ರಾಮದ ಹಿರಿಯರ ಅಭಿಮಾನಿಗಳ ಸಮ್ಮುಖದಲ್ಲಿ ಪೂರ್ವಭಾವಿ ಸಭೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತಾಡಿದ ಅನ್ನಪೂರ್ಣ ಪ್ರಕಾಶನ ಸಂಸ್ಥೆಯ ಸಿರಿಗೇರಿ ಸ್ವಾಮಿ ರೇವಣಸಿದ್ದಯ್ಯ ಸ್ವಾಮಿಯವರು ರೈತರ ಪರ ಹೋರಾಟಗಾರರಾಗಿ ಹೊರಹೊಮ್ಮಿ ಗ್ರಾಮೀಣ ಮಟ್ಟದಲ್ಲಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆಯಲ್ಲಿ ನೇರ ನುಡಿವಾದಿಯಾಗಿ, ತಮ್ಮ ದಿಟ್ಟ ನಡೆಯ ಎದೆಗಾರಿಕೆಯ ರೈತರ ಪರ ಬೇಡಿಕೆಗಳನ್ನು ಮುಂದಿಟ್ಟು ರೈತಾಪಿ ವರ್ಗಕ್ಕೆ ನ್ಯಾಯ ದೊರಕಿಸಿ ಕೊಡುವಲ್ಲಿ ಮುಂಚೂಣಿಯಲ್ಲಿದ್ದರು.

ಇದೀಗ ಅವರ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ನೆರವೇರಿಸಲು ಎಲ್ಲರ ಸಹಕಾರ ಮುಖ್ಯ ಎಂದರು. ಚರ್ಚೆಯಲ್ಲಿ ಭಾಗವಹಿಸಿದ್ದ ಅನೇಕ ಗಣ್ಯರು ರೈತ ಮುಖಂಡರು ನರಗುಂದ ನವಲಗುಂದ ರೈತ ಹೋರಾಟ, ಬ್ರಿಟಿಷರ ವಿರುದ್ಧ 1943ರಲ್ಲಿ ಹೋರಾಟ ಮಾಡಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೈಲಿನಲ್ಲಿ ಬಂಧನಕ್ಕೆ ಒಳಪಟ್ಟಿದ್ದು, ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿ ಬಳ್ಳಾರಿ ಜೈಲಿನಲ್ಲಿ ಸೆರೆವಾಸ ಅನುಭವಿಸಿದ್ದು, ಕಳಸ ಬಂಡೂರಿ ಯೋಜನೆ ಹೋರಾಟದಲ್ಲಿ ಭಾಗವಹಿಸಿದ ಕ್ಷಣಗಳನ್ನು ತಮ್ಮದೇ ಆದ ನೆನಪುಗಳನ್ನು ಹಂಚಿಕೊಂಡರು. ಮಾತ್ರವಲ್ಲದೆ ತಮ್ಮ ಅಭಿಪ್ರಾಯ ಸಲಹೆ ಸೂಚನೆಗಳನ್ನು ನೀಡಿದರು. ಒಟ್ಟಾರೆ ಸಮಾರಂಭದ ಯಶಸ್ಸಿಗೆ ಎಲ್ಲರೂ ಶ್ರಮಿಸಲು ಒಕ್ಕೂರಲಿನಿಂದ ಒಪ್ಪಿಗೆ ಸೂಚಿಸಿದರು.
ಇದೇ ವೇಳೆ ಜೂಲೈ ತಿಂಗಳ ಮೊದಲನೇ ವಾರದಲ್ಲಿ ಶತಮಾನೋತ್ಸವ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. ವಿದ್ಯಾರ್ಥಿಗಳಿಗೆ ಸ್ಪರ್ಧೆ ಏರ್ಪಡಿಸಲು, ಸಿರಿಗೇರಿ ಮುಖ್ಯ ವೃತ್ತದಲ್ಲಿ ಪುತ್ತಳಿ ಪ್ರತಿಷ್ಠಾಪನೆ ಮಾಡಲು, ರೇವಣಸಿದ್ದಯ್ಯ ಸ್ವಾಮಿ ಅವರ ಹೆಸರಿನಲ್ಲಿ ರಾಜ್ಯ ಮಟ್ಟದ ರೈತ ಪ್ರಶಸ್ತಿ ನೀಡಲು,ರೈತಗೋಷ್ಠಿ ಏರ್ಪಡಿಸಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಕರೂರು ಮಾಧವ ರೆಡ್ಡಿ,ಶಾನವಾಸಪುರ ಶಾಂತನಗೌಡ, ಸಿಎಂ ನಾಗರಾಜ್ ಸ್ವಾಮಿ, ಎನ್.ಪಂಪಾಪತಿ, ಚೆನ್ನಯ್ಯ ಸ್ವಾಮಿ,ಮಾಳಾಪುರ ಬಸವರಾಜ, ಜೆಎಂ ಮಲ್ಲಿಕಾರ್ಜುನಗೌಡ, ಅಮರೇಶ ಗೌಡ, ಗುಂಡಿಗನೂರು ಪಂಪನಗೌಡ, ಬಿ ಸೋಮಶೇಖರಪ್ಪ, ನಾಗೇಂದ್ರಪ್ಪ, ಶೇಖರಪ್ಪ ಗೌಡ, ಲಕ್ಷ್ಮಣ ಎಚ್ ಬಂಡಾರಿ,ರಾಣಪ್ಪ ಮಾಸ್ತರ, ಡಾ : ಮೃತ್ಯುಂಜಯ ಸ್ವಾಮಿ, ಮುರ್ಷಿದ್ ಅಹಮದ್, ಕಿಶೋರ್ ಕುಮಾರ್, ರಮೇಶ್ ಭಜಂತ್ರಿ, ಹೊಳಗುಂದಿ ದ್ಯಾವಣ್ಣ, ಆನಂದ ಗೌಡ, ಗುರು ಪುತ್ರ, ಸೇರಿದಂತೆ ಸುಮಾರು ಸುತ್ತಮುತ್ತಲಿನ ಹಳ್ಳಿಯ ರೇವಣಸಿದ್ದಯ್ಯ ಸ್ವಾಮಿ ಅಭಿಮಾನಿಗಳು, ಬಂಧು ಬಳಗ, ರೈತ ಹೋರಾಟಗಾರರು ಸೇರಿದಂತೆ ನೂರಾರು ಜನ ಇದ್ದರು. ಸಭೆಯನ್ನು ಚೆನ್ನಯ್ಯ ಸ್ವಾಮಿ ನಿರೂಪಿಸಿ ವಂದಿಸಿದರು.






