ಸಿರಿಗೇರಿ ಫೆಬ್ರವರಿ 20: ಮಕ್ಕಳು ವಿದ್ಯಾಭ್ಯಾಸದ ಜೊತೆಯಲ್ಲಿ ಕಲಾ ಕ್ಷೇತ್ರದಲ್ಲಿ ಮುಂದುವರೆಯಬೇಕು ಎಂದು ಕ್ಷೇತ್ರ ಸಮನ್ವಯ ಅಧಿಕಾರಿ ಕಾರ್ಯಾಲಯದ ಬಿ ಆರ್ ಪಿ ಸದಾನಂದ ಆಚಾರಿ ತಿಳಿಸಿದರು. ಅವರು ಇಲ್ಲಿನ ಎಸ್ ಡಬ್ಲ್ಯೂ ಶಾಲೆಯಲ್ಲಿ ಏರ್ಪಡಿಸಿದ್ದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು. ಮಕ್ಕಳಲ್ಲಿ ತಮ್ಮದೇ ಆದ ಕಲೆ ಇರುತ್ತದೆ. ಆದರೆ ಎಲೆಮರೆಯ ಕಾಯಿಯಂತೆ ಅಡಗಿ ಕುಳಿತಿವೆ. ಇಂತಹ ಮಕ್ಕಳ ಪ್ರತಿಭೆಯನ್ನು ಹೊರ ತರುವುದೇ ಈ ಕಾರ್ಯಕ್ರಮದ ಉದ್ದೇಶ ಎಂದರು . ಆನಂತರ ಪ್ರಾಸ್ತಾವಿಕ ನುಡಿಗಳನ್ನು ಮಾತನಾಡಿದ ಶಾಲಾ ಮುಖ್ಯ ಗುರು ಗೋವಿಂದರಾಜು ಕೆ ಓ ಬೆಟ್ಟಗುಡ್ಡಗಳ ನಡುವೆ ಸುತ್ತುವರಿದಿರುವ ಈ ಶಾಲೆ ಕಳೆದ 28 ವರ್ಷಗಳಿಂದ ಎಲ್ಲಾ ಮೂಲದ ಮಕ್ಕಳಿಗೆ ಸರ್ಕಾರಿ ಸೌಲಭ್ಯದ ಜೊತೆಯಲ್ಲಿ ಮಕ್ಕಳಿಗೆ ಬೇಕಾದ ಕಲೆಯ ಸಾಹಿತ್ಯ ಎಲ್ಲವನ್ನು ರೂಪಿಸಿಕೊಡುವಲ್ಲಿ ನಮ್ಮ ಶಿಕ್ಷಣ ಇಲಾಖೆ ಹಾಗೂ ಶಿಕ್ಷಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ಇಂತಹ ಶಾಲೆಗೆ ಅನೇಕ ದಾನಿಗಳು ಕೂಡ ಸಹಕರಿಸುತ್ತಿದ್ದಾರೆ. ಅವರಿಗೆ ಹೃದಯಪೂರ್ವಕ ಅಭಿನಂದನೆ ಎಂದರು. ಆನಂತರ ಮಾತನಾಡಿದ ಸರ್ಕಾರಿ ನೌಕರರ ಸಂಘದ ಖಜಾಂಚಿ ದುರ್ಗಪ್ಪ ಹೆಚ್. ಸಿರಿಗೇರಿ ಎಂಬ ಹೋಬಳಿ ಮಟ್ಟದಲ್ಲಿ ಇಂತಹ ಕಾರ್ಯಕ್ರಮ ನಡೆಸುತ್ತಿರುವುದು ಆಶ್ಚರ್ಯದ ಸಂಗತಿ. ಅದರಲ್ಲೂ ಸಹ ಇಲ್ಲಿನ ಶಾಲೆಯ ಮುಖ್ಯ ಗುರು ಗೋವಿಂದರಾಜು ಶ್ರಮ ಶ್ಲಾಘನೀಯ ಎಂದರು. ತದನಂತರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಗುರು ಶಿವಕುಮಾರ್ ಮನುಷ್ಯ ಜೀವನದಲ್ಲಿ ಏನಾದರೂ ಗಳಿಸಬಹುದು. ಏನಾದ್ರು ಕಸಿ ದುಕೊಳ್ಳಬಹುದು. ಆದರೆ ವಿದ್ಯೆ ಜ್ಞಾನವನ್ನು ಕಸಿದುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ಈ ಶಾಲೆಯ ಎಲ್ಲಾ ಮಕ್ಕಳು ಭರತನಾಟ್ಯ, ಮನರಂಜನೆ, ಹಲವಾರು ಗೀತೆ ಗಾಯನಗಳೊಂದಿಗೆ ನಟಿಸಿದ ಕಲೆ ನೃತ್ಯ ಪ್ರೇಕ್ಷಕರ ಗಮನ ಸೆಳೆದಿದ್ದು ವಿಶೇಷವಾಗಿತ್ತು. ಅಧ್ಯಕ್ಷತೆಯನ್ನು ಶಾಲಾ ಎಸ್. ಡಿ.ಎಂ.ಸಿ ಅಧ್ಯಕ್ಷ ಗುಡಟ್ಟಿ ಶಿವರಾಮ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಳ್ಳಿ ಅಂಜಿನಿ ಹಾಗೂ ಗುಡಟ್ಟಿ ಹನುಮಂತ 100 ತಟ್ಟೆಗಳನ್ನು ದಾನವಾಗಿ ಮಕ್ಕಳಿಗೆ ನೀಡಿದರು. ಬಂಡ್ರಾಲ ಚಂದ್ರಶೇಖರ ಇವರು ನೃತ್ಯದಲ್ಲಿ ವಿಜೇತರಾದ ಮಕ್ಕಳಿಗೆ ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಬಹುಮಾನ ನೀಡಿ ಗೌರವಿಸಿದರು. ಕಾರ್ಯಕ್ರಮದಲ್ಲಿ ಸಿದ್ದರಾಂಪುರ ಶಾಲೆಯ ಮುಖ್ಯ ಗುರು ಸೈಯದ್ ಅಹಮದ್, ಗ್ರಾಪಂ ಸದಸ್ಯೆ ಶಿವಮ್ಮ ರಾಜ್ ಕುಮಾರ್, ಪ್ರಮುಖರಾದ ಬಿ. ಕರಿ ಲಿಂಗಪ್ಪ, ಎಸ್ಡಿಎಂಸಿ ಉಪಾಧ್ಯಕ್ಷರಾದ ಹಂಪಮ್ಮ ಶಿಕ್ಷಕ ವೃಂದದವರಾದ ಗುರುಸ್ವಾಮಿ, ಮಂಗಳಮ್ಮ, ಚೈತ್ರ ಸೇರಿದಂತೆ ನೂರಾರು ಜನ ಪೋಷಕರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಶಾಲಾ ಶಿಕ್ಷಕರಾದ ಮಧು ಹಾಗೂ ಹರೀಪ ನಿರೂಪಿಸಿ ನಿರ್ವಹಿಸಿ ವಂದಿಸಿದರು.






