ಸಿರಿಗೇರಿ ಏ,14: ಗ್ರಾಮದ ಅಂಬೇಡ್ಕರ್ ವೃತ್ತದ ಬಳಿ ನಾನಾ ಪ್ರಗತಿಪರ ಸಂಘಟನೆಗಳಿಂದ 135 ನೇ ಅಂಬೇಡ್ಕರ್ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ದಲಿತ ಒಕ್ಕೂಟದ ಸಂಚಾಲಕ ಹೆಚ್. ತಿಪ್ಪೇಸ್ವಾಮಿ ಅಂಬೇಡ್ಕರ್ ಬರೆದ ಸಂವಿಧಾನ ಜಾಗತಿಕ ಪ್ರಸಿದ್ಧವಾಗಿದ್ದು, ನೊಂದ ಜನರ ಧ್ವನಿಯಾಗಿ ಮಾರ್ದನಿಸಿದೆ.
ಮಹಿಳಾ ಮೀಸಲಾತಿ, ಶಿಕ್ಷಣ, ಸಾಂಸ್ಕೃತಿಕ, ಉದ್ಯೋಗ ಸೇರಿದಂತೆ ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕನ್ನು ಒದಗಿಸಿರುವ ಸಂವಿಧಾನ ಶಿಲ್ಪಿ ಎನಿಸಿಕೊಂಡಿರುವುದು ಭಾರತ ದೇಶದ ಹೆಮ್ಮೆಯ ಸಂಗತಿ. ಅಲ್ಲದೆ ಭರತ ಖಂಡದಲ್ಲಿ ಪ್ರಜಾಪ್ರಭುತ್ವ, ಗಣತಂತ್ರ ವ್ಯವಸ್ಥೆ ಮನುಜ ಕುಲಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಅದೇ ರೀತಿ ಗ್ರಾಮದ ಎಲ್ಲಾ ಸರ್ಕಾರಿ ಕಚೇರಿ, ಶಾಲೆ ಕಾಲೇಜುಗಳಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ವಿಶೇಷವಾಗಿ ಇಲ್ಲಿನ ಬಸ್ ನಿಲ್ದಾಣದಲ್ಲಿ ಪ್ರಥಮ ಬಾರಿಗೆ ಸಾರ್ವಜನಿಕರು ಅಂಬೇಡ್ಕರ್ ಜಯಂತಿಯನ್ನು ಆಚರಿಸುವ ಮೂಲಕ ಪ್ರಯಾಣಿಕರ ಗಮನ ಸೆಳೆದರು. ಈ ಸಂದರ್ಭದಲ್ಲಿ ಎಸ್ ಎಂ ನಾಗರಾಜ್ ಸ್ವಾಮಿ, ಹೊಳಗುಂದಿ ದ್ಯಾವಣ್ಣ, ಕರಿಬಸವ, ಹೆಚ್. ತಾಯಪ್ಪ, ಹೆಚ್. ರಾಮಲಿಂಗ, ಬಳ್ಳಾರಿ ವೀರೇಶ, ಶೇಷಪ್ಪ, ಮಲ್ಲಿಕಾರ್ಜುನ, ಗುಡಟ್ಟಿ ಈರಣ್ಣ, ದ್ಯಾವಣ್ಣ, ಬಿಚುಗತ್ತಿ ನಾಗರಾಜ, ಸೇರಿದಂತೆ ಪ್ರಗತಿಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.






