ಸಿರಿಗೇರಿ : ದುಡಿಮೆ ಇಲ್ಲದೆ ಯಾವುದೇ ವಸ್ತು, ಅವಕಾಶ ಉಚಿತವಾಗಿ ಬರುವುದಿಲ್ಲ ಎಂದು ಸಿದ್ದಗಂಗಾ ಮಠದ ಶ್ರೀ ಸಿದ್ದಗಂಗಾ ಶಿವಸಿದ್ದೇಶ್ವರ ಮಹಾಸ್ವಾಮಿಗಳು ತಿಳಿಸಿದರು. ಅವರು ಸಿರಿಗೇರಿ ಸಮೀಪದ ಸಿದ್ದರಾಂಪುರ ಗ್ರಾಮದ ಕದಳಿವನ ಶ್ರೀ ಸಿದ್ದೇಶ್ವರಸ್ವಾಮಿಗಳ ಬೃಹನ್ ಮಠದಲ್ಲಿ ಏರ್ಪಡಿಸಿದ್ದ ಧರ್ಮಸಭೆಯಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಗದಲ್ಲಿ ಅರಿವಿನ ಯಾತ್ರೆ ಮಾಡಬೇಕೆನ್ನುವುದು ಸಿದ್ದೇಶ್ವರ ತಾತನವರ ಪ್ರೇರಣೆಯ ಸಂಕಲ್ಪವಾಗಿತ್ತು. ಈ ಮಠದಲ್ಲಿ ಅನೇಕ ಹೆಸರಾಂತ ಶ್ರೀಗಳು ಬಂದು ಹೋಗಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ಸಾಮಾಜಿಕ ಚಿಂತನೆ ಅವಶ್ಯವಿದೆ.
ಸಣ್ಣ ಸಣ್ಣ ಸಮಸ್ಯೆಗಳು ಬದುಕಿಗೆ ತೊಡಕಾಗುತ್ತಿವೆ. ಅರಿವಿನ ಕೊರತೆಯಿಂದ ಜನ ಅಜ್ಞಾನದ ಅಂಧಕಾರ ತೊಡೆದು ಸುಜ್ಞಾನದ ಕಡೆಗೆ ಸಾಗಬೇಕಿದೆ. ಅಂತರಂಗದ ಅರಿವನ್ನು ಶಿವನು ಪರಿಗಣಿಸುತ್ತಾನೆ. ಅದು ಬಾಹ್ಯದ ಬಲದಿಂದ ಅಲ್ಲ. ಭೌತಿಕವಾದ ಮನಸ್ಥಿತಿಯಿಂದ ಮನುಕುಲಕ್ಕೆ ಉತ್ತಮ ಸಂದೇಶ ನೀಡಬೇಕಾಗಿದೆ. ಇದನ್ನು ಸಮಾಜಕ್ಕೆ ಕೊಡುಗೆ ನೀಡಿದ ಬಸವಣ್ಣ ಹಾಗೂ ಸಿದ್ದಗಂಗಾ ಶ್ರೀಗಳ ನೋಡಿದವರು ನಾವೇ ಧನ್ಯರು.ಈ ಭಾಗಕ್ಕೆ ಶಿವಕುಮಾರ ಪೂಜ್ಯರು ಬಂದು ಹೋಗಿದ್ದಾರೆ. ಈಗಿನ ಪೀಳಿಗೆಗೆ ಅವರ ಸಂದೇಶ ತಿಳಿಸುವುದು, ಅವರ ಮಾರ್ಗದರ್ಶನ ಆದರ್ಶಗಳನ್ನು ನೆನೆಯುವುದು.ಸಮಾಜ ಸೇವೆಗಾಗಿ ಸೇವೆ, ತ್ಯಾಗದ ಅವಶ್ಯಕತೆಯನ್ನು ಮನಗಾಣಿಸುವುದು. ಜನರನ್ನು ಉತ್ತಮ ಕಾಯಕಗಳಲ್ಲಿ ತೊಡಗುವಂತೆ ಪ್ರೇರಣೆ ನೀಡುವುದು. ಕಾಯಕ, ದಾಸೋಹ, ಇಷ್ಟಲಿಂಗ ಪೂಜೆ, ಜೀವನದಲ್ಲಿ ಅಳವಡಿಸಿಕೊಂಡ ಶಿವಕುಮಾರ ಶ್ರೀಗಳು ಸಹಸ್ರ ವಿದ್ಯಾರ್ಥಿಗಳನ್ನು ಗಮನಿಸುತ್ತಿದ್ದರು. ಗಡಿಯಾರವು ನಾಚಿಸುವಂತೆ ಕೆಲಸ ಮಾಡುತ್ತಿದ್ದರು. ಅವರ ಕಾಯಕದ ನಿಷ್ಠೆ ನಾವು ಮೈಗೂಡಿಸಿಕೊಳ್ಳಬೇಕಿದೆ, ಈಗಿನ ಕೃಷಿಕರು ಹಣಕ್ಕೆ ಆದ್ಯತೆ ನೀಡುತ್ತಿದ್ದಾರೆ. ಆಡಂಬರಕ್ಕೆ ಗುರಿಯಾಗಿ ಸಾಲಗಾರರಾಗುತ್ತಿದ್ದಾರೆ. ಪೈಪೋಟಿಯಲ್ಲಿ ವಿವಾಹ, ದೇವರ ಕಾರ್ಯ, ಇತರೆ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ, ಇದನ್ನು ಕಡಿಮೆ ಮಾಡಿದರೆ ಸಾಲಭಾದೆಯಿಂದ ಹೊರ ಬರುತ್ತಾರೆ. ಅರಿವಿನ ಯಾತ್ರೆಯ ಉದ್ದೇಶ ಮಹಾತ್ಮರನ್ನು ನೆನೆಯುವುದು. ಶಿಕ್ಷಣದ ಜಾಗೃತಿ ಮೂಡಿಸುವದು.
ಆರೋಗ್ಯಕ್ಕೆ ಪ್ರಾಧಾನ್ಯ ನೀಡುವ ವಿಷಯಗಳನ್ನು ಇಟ್ಟುಕೊಂಡು ಈ ಭಾಗದಲ್ಲಿ ನಡೆಸಲಾಗುತ್ತಿದೆ. ಮುಖ್ಯವಾಗಿ ಉತ್ತರ ಕರ್ನಾಟಕದ ಜನರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವ ಅವಶ್ಯವಿದೆ ಮಠದಲ್ಲಿನ ವಿದ್ಯಾರ್ಥಿಗಳ ಮೇಲೆ ಗಮನಹರಿಸಿದರೆ ಉತ್ತರ ಕರ್ನಾಟಕದಲ್ಲಿ ಹೆಚ್ಚು ವಿದ್ಯಾವಂತರು ಇಲ್ಲದಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಶಿಕ್ಷಣಕ್ಕೆ ಮಹತ್ವ ನೀಡುವ ಮೂಲಕ ಮಕ್ಕಳನ್ನು ಪದವೀಧರರನ್ನಾಗಿ ಮಾಡುವ ಗುರಿಯನ್ನು ಇಟ್ಟುಕೊಳ್ಳಬೇಕೆಂದು ತಿಳಿಸಿದರು. ನಂತರ ಶ್ರೀಮಠದ ಕಾಯಕಯೋಗಿ ಚಿದಾನಂದ ತಾತನವರು ಮಾತನಾಡಿ, ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮಿಗಳು ಮಾನವ ಕುಲದ ಉದ್ದಾರಕರು. ಸಮಸ್ಯೆಗಳಲ್ಲಿ ಇದ್ದ ಮಠವನ್ನು ತಮ್ಮ ಕಾಯಕ ನಿಷ್ಠೆಯಿಂದ ದುಡಿದು ಕರುನಾಡಿನ ಹೆಸರಾಂತ ಮಠವಾಗಲು ಶ್ರಮಿಸಿದವರು. ಹೆಣ್ಣು, ಮಣ್ಣು, ಹೊನ್ನು, ಬದಲಿಗೆ ಅನ್ನ, ಅಕ್ಷರ, ಆಶ್ರಯ, ಎಂಬ ಧ್ಯೇಯಗಳನ್ನು ಇಟ್ಟುಕೊಂಡು ಸಾಧಿಸಿ ತೋರಿದವರು. ಬಸವಣ್ಣನವರ ಉಕ್ತಿಯಂತೆ ಅಂಗಭೋಗ ಬಯಸಿ ಬಂದದ್ದು, ಲಿಂಗ ಭೋಗ ಬಯಸದೆ ಬರುವುದು ಅದೇ ತರನಾಗಿ ಸಿದ್ದಗಂಗಾ ಕಿರಿಯ ಶ್ರೀಗಳು ಮಠಕ್ಕೆ ಬಂದಿರುವುದು ಲಿಂಗ ಭೋಗದ ಶಕ್ತಿಯಾಗಿದೆ. ಅವರು ಮಠದಲ್ಲಿ ಸರಳ ರೀತಿಯಲ್ಲಿ ಶಿವ ಪೂಜೆ, ಆತ್ಮಲಿಂಗ ಪೂಜೆ ಮಾಡಿದ್ದು ನಮಗೆ ಸರಳ ಪೂಜೆಯ ಪ್ರೇರಣೆ ನೀಡಿದೆ. ಸಿದ್ಗಂಗಾ ಶ್ರೀಗಳ ಪುರಾಣ ಬರೆಯಿಸಿ ಮುಂದಿನ ಪೀಳಿಗೆಗೆ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದ್ದಾರೆ. ಯುವಕರು ನಟರ ಬಗ್ಗೆ ಅಂದಾಭಿಮಾನ ಇಟ್ಟುಕೊಳ್ಳುವುದು ಸಲ್ಲದು. ತಂದೆ ತಾಯಿಗಳ ಇಂದಿನ ಯುವಕರಿಗೆ ನಿಜವಾದ ಹೀರೋಗಳು. ಅವರಿಗೆ ಅಭಿಮಾನ ತೋರುವುದು ಸೂಕ್ತ ಎಂದು ತಿಳಿಸಿದರು. ಪ್ರಾರಂಭದಲ್ಲಿ ಪಂಪನಗೌಡ ರವರು ಪ್ರಸ್ತವಿಕ ಮಾತನಾಡಿದರು.ಕಾರ್ಯಕ್ರಮದಲ್ಲಿ ಶ್ರೀಮಠದ ಭಕ್ತರು ಮತ್ತು ಮುಖಂಡರಾದ ಸಿಎಂ ನಾಗರಾಜ ಸ್ವಾಮಿ, ಅರ್ಚಕರಾದ ವೀರಭದ್ರಯ್ಯ, ವೀರೇಶಯ್ಯ, ಮಠದ ಭಕ್ತರು, ಹಳೆಯ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದರು.






