ಬೆಂಗಳೂರು, ಮೇ 31: ಶಿಕ್ಷಣ ಕ್ಷೇತ್ರದಲ್ಲಿ ನಿರಂತರ ಸೇವೆ, ಕನ್ನಡ ಭಾಷೆಯ ಮೇಲಿನ ಅಪಾರ ಪ್ರೀತಿ ಹಾಗೂ 2025/26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಮತ್ತು ನೂರಕ್ಕೂ ನೂರು ಅಂಕ ಪಡೆಯಲು ಕಾರಣರಾಗಿದ್ದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಸಲ್ಲಿಸಿದ ಅಮೂಲ್ಯ ಕೊಡುಗೆಯನ್ನು ಪರಿಗಣಿಸಿ, ಬೆಂಗಳೂರು ದೊಡ್ಡನಾಗಮಂಗಲದ ನ್ಯೂ ಕೇಂಬ್ರಿಡ್ಜ್ ಹೈ ಸ್ಕೂಲ್ನ ಮುಖ್ಯ ಶಿಕ್ಷಕಿ ಹಾಗೂ ಕನ್ನಡ ಶಿಕ್ಷಕಿಯಾದ ಶ್ರೀಮತಿ ಸವಿತಾ ಮಂಜುನಾಥ್ ಅವರಿಗೆ ಕರುನಾಡ ಕನ್ನಡ ಕಲಾಸಿರಿ ಬಳಗ ವತಿಯಿಂದ ದಿನಾಂಕ 31/ 5 /2026 ಭಾನುವಾರ 2026ನೇ ಸಾಲಿನ “ ಅತ್ಯುತ್ತಮ ಆದರ್ಶ ಶಿಕ್ಷಕ ಪ್ರಶಸ್ತಿ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಹಾಗೆ ಇವರಿಗೆ ಹೇಮಲ್ ಎಜುಕೇಶನ್ ಚಾರಿಟಬಲ್ ಟ್ರಸ್ಟ್ (ರಿ.) ಹಾಗೂ ಟಿ.ವಿ.06 (ಸಾಧಕರ ಧ್ವನಿ) ಮಾಧ್ಯಮದ ಸಹಯೋಗದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಾಂಸ್ಕೃತಿಕ ಸಮುಚ್ಚಯ ಕಲಾಗ್ರಾಮದಲ್ಲಿ ಆಯೋಜಿಸಲಾದ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಸರ್ವ ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು ಸಮಾರಂಭದಲ್ಲಿ ಹೇಮಲ್ ಎಜುಕೇಶನ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಪ್ರಕಾಶ್ ಡಿ.ಸಿ., ಕಾರ್ಯದರ್ಶಿಗಳಾದ ಡಾ. ನವೀನ್ ಕುಮಾರ್ ಎಲ್.ಸಿ. ಹಾಗೂ ವಿವಿಧ ಗಣ್ಯರು, ಶಿಕ್ಷಣ ತಜ್ಞರು ಮತ್ತು ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀಮತಿ ಸವಿತಾ ಮಂಜುನಾಥ್ ಅವರು ಕಳೆದ 13 ವರ್ಷಗಳಿಂದ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದು, ತಮ್ಮ ಬೋಧನಾ ಕೌಶಲ್ಯ, ಶಿಸ್ತು ಮತ್ತು ವಿದ್ಯಾರ್ಥಿ ಸ್ನೇಹಿ ಮನೋಭಾವದ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. 2025-26ನೇ ಸಾಲಿನ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವಂತೆ ಪ್ರೋತ್ಸಾಹ ನೀಡಿರುವುದು ಅವರ ಬೋಧನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.
ಮುಖ್ಯ ಶಿಕ್ಷಕಿಯಾಗಿ ಶಾಲೆಯ ಆಡಳಿತ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುವುದರ ಜೊತೆಗೆ ಶಿಕ್ಷಕರಿಗೆ ಮಾರ್ಗದರ್ಶನ ನೀಡಿ, ಶಾಲೆಯು 100% ಫಲಿತಾಂಶ ಸಾಧಿಸಲು ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ನಾಯಕತ್ವ ಮತ್ತು ಶ್ರಮದಿಂದ ನ್ಯೂ ಕೇಂಬ್ರಿಡ್ಜ್ ಹೈ ಸ್ಕೂಲ್ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸಿದೆ.
ಅವರ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ವಿವಿಧ ಸಂಘಟನೆಗಳು ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಕರುನಾಡ ಕನ್ನಡ ಕಲಾಸಿರಿ ಬಳಗ ವತಿಯಿಂದ 2025ರಲ್ಲಿ “ಉತ್ತಮ ಸಾಧಕ ಶಿಕ್ಷಕ ಪ್ರಶಸ್ತಿ”, 2026ರಲ್ಲಿ “ಅತ್ಯುತ್ತಮ ಆದರ್ಶ ಶಿಕ್ಷಕಿ ಪ್ರಶಸ್ತಿ”, ಎಜಿಎಸ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಕರ್ನಾಟಕ ಸಾಹಿತ್ಯ ವಿದ್ಯಾರತ್ನ ಪ್ರಶಸ್ತಿ”, ಹಾಗೂ ಹೇಮಲ್ ಎಜುಕೇಶನ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ “ಸರ್ವ ಶ್ರೇಷ್ಠ ಶಿಕ್ಷಕ ರತ್ನ ಪ್ರಶಸ್ತಿ” ಲಭಿಸಿವೆ.
ಶಿಕ್ಷಣ ಕ್ಷೇತ್ರದಲ್ಲಿ ಅವರ ನಿಸ್ವಾರ್ಥ ಸೇವೆ, ಕನ್ನಡ ಭಾಷೆಯ ಬೆಳವಣಿಗೆಗೆ ನೀಡುತ್ತಿರುವ ಕೊಡುಗೆ ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ತೋರಿದ ಬದ್ಧತೆಯನ್ನು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗಣ್ಯರು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, “ಶ್ರೀಮತಿ ಸವಿತಾ ಮಂಜುನಾಥ್ ಅವರಂತಹ ಶಿಕ್ಷಕರು ಸಮಾಜಕ್ಕೆ ಆದರ್ಶವಾಗಿದ್ದಾರೆ. ಶಿಕ್ಷಣದ ಮೂಲಕ ಉತ್ತಮ ನಾಗರಿಕರನ್ನು ರೂಪಿಸುವ ಅವರ ಸೇವೆ ಶ್ಲಾಘನೀಯ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮತ್ತಷ್ಟು ಗೌರವಗಳನ್ನು ಪಡೆಯಲಿ” ಎಂದು ಶುಭ ಹಾರೈಸಿದರು.
ಶಿಕ್ಷಣವನ್ನು ಸೇವೆಯಾಗಿ ಪರಿಗಣಿಸಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವ ಶ್ರೀಮತಿ ಸವಿತಾ ಮಂಜುನಾಥ್ ಅವರ ಸಾಧನೆ ಶಿಕ್ಷಕ ಸಮುದಾಯಕ್ಕೆ ಹೆಮ್ಮೆಯ ವಿಷಯವಾಗಿದ್ದು, ಅವರ ಮುಂದಿನ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ ಎಂಬುದು ಎಲ್ಲರ ಆಶಯವಾಗಿದೆ.






